X

ಆಧುನಿಕ ಕನ್ನಡ ನಾಡಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್

ನಾಲ್ವಡಿ ಕೃಷ್ಣರಾಜ ಒಡೆಯರ್ಕೃ. ಪೆ: ವಿ & ಎ ಕಲೆಕ್ಷನ್

ಕನ್ನಡ ನಾಡಿನ ಪ್ರಾತಃ ಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರು ಆಧುನಿಕ ಕನ್ನಡ ನಾಡಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್.  ಇಂದು ನಮ್ಮ ರಾಜ್ಯ ರಾಜಧಾನಿ  ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ.  ವಿಶ್ವದಾದ್ಯಂತ ಬೆಂಗಳೂರು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ದೇಶ  ಯುವಜನರು ಉದ್ಯೋಗಾವಕಾಶಗಳನ್ನು ಅರಸುವಾಗ ಅವರ ಮನಸ್ಸಿನಲ್ಲಿ ಮೂಡುವುದು ಮೊದಲಿಗೆ  ಬೆಂಗಳೂರಿನ  ಹೆಸರು.  ಮಾಹಿತಿ ತಂತ್ರಜ್ಞಾನ, ಕೈಗಾರಿಕೆಗಳು, ಸ್ಟಾರ್ಟ್‌ ಅಪ್‌, ಶೈಕ್ಷಣಿಕ ವಲಯ ಹೀಗೆ ಬೆಂಗಳೂರು ಹತ್ತು ಹಲವು ಕ್ಷೇತ್ರಗಳಲ್ಲಿ ಇಂದು ವಿಶ್ವವ್ಯಾಪ್ತಿಯಾಗಿದೆ.  ಆದರೆ ಈ  ಸಾಧನೆ ಕೇವಲ ಒಂದೆರಡು ದಶಕಗಳಲ್ಲಿ ಸಾಧನೆಯಾದದ್ದಲ್ಲ.  ಅದರ ಹಿಂದೆ ನೂರಾರು ವರ್ಷಗಳ ಪರಿಶ್ರಮವಿದೆ.  ಈ ಎಲ್ಲವೂ   ಮೈಸೂರಿನ ಪ್ರಸಿದ್ಧ ಮಹಾರಾಜರಾಗಿದ್ದ  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಕಿದ ಅಡಿಪಾಯದ  ಮೇಲೆ ಎದ್ದು ನಿಂತಿರುವ ಭವ್ಯ ಸೌಧವಾಗಿದೆ.  

ಇವರ ಸಾಧನೆ, ಕೊಡುಗೆ ಪರಿಗಣಿಸಿ, ಇಂದು ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ  ಕೃಷ್ಣರಾಜ ಒಡೆಯರ್ ಹೆಸರು ಇಡಲು ರಾಜ್ಯ ಸರಕಾರ ನಿರ್ಧರಿಸಿದೆ.  ಕನ್ನಡ ನಾಡಿನಲ್ಲಿ ಇಂದಿಗೂ ಅವರನ್ನು ನವ ಕರ್ನಾಟಕದ ಪಿತಾಮಹ ಎಂದೇ ಜನರು ಪೂಜಿಸುತ್ತಾರೆ. ಅವರ ಹೆಸರಿನಲ್ಲಿ ಸರಕಾರ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡುತ್ತದೆ. 

Photo ನಾಲ್ವಡಿ  ಕೃಷ್ಣರಾಜ ಒಡೆಯರ್

ಕೃಪೆ: ವಿ & ಎ  ಕಲೆಕ್ಷನ್ 

ಕನ್ನಡ ಭಾಷೆ-ನಾಡು- ನುಡಿಗೆ ಸಂಬಂಧಿಸಿ ಮಹೋನ್ನತ ಕೊಡುಗೆ ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದ ಕೀರ್ತಿ ಕೂಡ ನಾಲ್ವಡಿಯವರದ್ದು. 

ಕನ್ನಡ ನಾಡಿನ ಶ್ರೇಷ್ಠ ರಾಜಮನೆತನಗಳಲ್ಲಿ ಒಂದಾದ, ಮೈಸೂರು ಸಾಮ್ರಾಜ್ಯದ 24 ನೇ ರಾಜರಾಗಿದ್ದಾರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್.  ದೇಶದ ಸಿಲಿಕಾನ್ ಸಿಟಿ   ಬೆಂಗಳೂರು  ಇಂದು ಇಷ್ಟರ ಮಟ್ಟಿಗೆ ಬೆಳೆಯಲು  ಅವರ ದೂರದರ್ಶಿತ್ವವೇ ಕಾರಣ.

ನಾಲ್ವಡಿ ಕೃಷ್ಣರಾಜ ಒಡೆಯರ್‌ರ  ಮರಣ ಸಂದರ್ಭದಲ್ಲಿ ಅವರ ಬಳಿ ಸುಮಾರು 400 ಮಿಲಿಯನ್ ಯುಎಸ್‌ ಡಾಲರ್‌ ವೈಯಕ್ತಿಕ ಸಂಪತ್ತು ಇತ್ತು.  ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರ ಆಳ್ವಿಕೆಯಲ್ಲಿ, ಮೈಸೂರು ವಿಶ್ವದಲ್ಲೇ ಅತ್ಯುತ್ತಮ ಆಡಳಿತದ ರಾಜ್ಯವೆಂದು ಹೆಸರುವಾಸಿಯಾಗಿತ್ತು.  ಇವಿಷ್ಟೇ ಸಾಕು ಅವರ ಆಡಳಿತದ ವೈಭವವನ್ನು ನೆನಪಿಸಲು. 

ನಾಲ್ವಡಿ ಕೃಷ್ಣರಾಜ ಒಡೆಯರ್  ಆಡಳಿತದ  ಅವಧಿಯಲ್ಲಿ ಕರ್ನಾಟಕದಲ್ಲಿ   ಹಲವಾರು ಪ್ರಮುಖ ಶೈಕ್ಷಣಿಕ ಹಾಗು ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಮತ್ತು ಬೆಂಗಳೂರು ಇಂದಿನ ರೀತಿಯಲ್ಲಿ ತ್ವರಿತಗತಿಯಲ್ಲಿ ಅಭಿವೃದ್ಧಿ ಕಾಣುತ್ತಾ ಪ್ರಗತಿ ಹೊಂದಿದ  ನಗರವಾಗಲು ತನ್ನ ಮೊದಲ ಹೆಜ್ಜೆಗಳನ್ನು ಅಂದೇ ಇಟ್ಟಿತು.  ಇಂದಿಗೂ   ಅವರ ಜಯಂತಿ ಯನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದಕ್ಕೆ ಮುಖ್ಯ ಕಾರಣ ಅವರ ದೂರದೃಷ್ಟಿತ್ವದ  ಆಡಳಿತ, ಜನಪರ ನಿರ್ಧಾರಗಳು, ಸಾಮಾಜಿಕ ನ್ಯಾಯದ ಕ್ರಾಂತಿ, ಇತ್ಯಾದಿಗಳು.  

ಮಹಾರಾಜರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

ಮಹಾರಾಜ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಕುರಿತ  ಪ್ರಮುಖ  ಸಂಗತಿಗಳು

•  ಇವರು ಮೈಸೂರು ಸಾಮ್ರಾಜ್ಯದ 24 ನೇ ಮಹಾರಾಜರಾಗಿದ್ದರು

•  ಫೆಬ್ರವರಿ ಒಂದು, 1895 ರಂದು ಇವರ   ಪಟ್ಟಾಭಿಷೇಕ ನಡೆಯಿತು.

• ಇವರ  ಆಳ್ವಿಕೆಯ ಅವಧಿ- 28 ಡಿಸೆಂಬರ್ 1894 – 3 ಆಗಸ್ಟ್ 1940

• ಇವರು ಮಹಾರಾಜ  ಚಾಮರಾಜೇಂದ್ರ ಒಡೆಯರ್ ಅವರ ಉತ್ತರಾಧಿಕಾರಿಯಾಗಿದ್ದರು.

• ಜಯಚಾಮರಾಜೇಂದ್ರ ಒಡೆಯರ್ ಅವರ  ಉತ್ತರಾಧಿಕಾರಿ 

ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿ – ಆರಂಭಿಕ ವರ್ಷಗಳು

ನಾಲ್ವಡಿ  ಕೃಷ್ಣರಾಜ ಒಡೆಯರ್, ಮಹಾರಾಜ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ವಾಣಿ ವಿಲಾಸ ಸನ್ನಿಧಾನದ ಮೊದಲನೇ ಮಗ.

 ಅವರು ಜೂನ್ 4, 1884 ರಂದು ಮೈಸೂರು ಅರಮನೆಯಲ್ಲಿ ಜನಿಸಿದರು. ಅವರ ಆರಂಭಿಕ ಶಿಕ್ಷಣವು ಲೋಕರಂಜನ್ ಅರಮನೆಯಲ್ಲಿ ಪಿ ರಾಘವೇಂದ್ರರಾವ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಆರಂಭದಲ್ಲಿ  ಯುವರಾಜನಿಗೆ ಪಾಶ್ಚಾತ್ಯ ಅಧ್ಯಯನ, ಕನ್ನಡ, ಸಂಸ್ಕೃತ, ಭಾರತೀಯ ಮತ್ತು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಮತ್ತು ಕುದುರೆ ಸವಾರಿಯನ್ನು ಕಲಿಸಲಾಯಿತು.

ಬಾಂಬೆ ನಾಗರಿಕ ಸೇವೆಯ ಸರ್ ಸ್ಟುವರ್ಟ್ ಫ್ರೇಸರ್ ಅವರು ಯುವರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಆಡಳಿತ ತರಬೇತಿ ನೀಡಿದರು. ಈ ಅಧ್ಯಯನಗಳು ಸಾಕಷ್ಟು ಪ್ರವಾಸಗಳಿಂದ ಕೂಡಿದ್ದು, ಆ ಮೂಲಕ ಯುವರಾಜರಿಗೆ   ತಾನು ಆಳುವ ರಾಜ್ಯದ ಆಡಳಿತ ಸ್ವರೂಪವನ್ನು ಕಲಿಸಲಾಯಿತು. ಹೀಗೆ ಆರಂಭದಲ್ಲೇ ಅವರಿಗೆ ಅತ್ಯಂತ ಶ್ರೇಷ್ಠ ಶಿಕ್ಷಣ ಒದಗಿಸಲಾಯಿತು. 

ನಾಲ್ವಡಿ  ಕೃಷ್ಣರಾಜ ಒಡೆಯರ್ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದಕೊಂಡರು. 1895 ರಲ್ಲಿ ತನ್ನ ತಂದೆಯ ಮರಣದ ನಂತರ ಸಿಂಹಾಸನವನ್ನು ಏರಿದರು.  ಅವರ ತಾಯಿ ಕೃಷ್ಣರಾಜ್‌ ಒಡೆಯರ್‌ ಪ್ರೌಢಾವಸ್ಥೆಗೆ ಬಂದು ರಾಜ್ಯಭಾರ ಮಾಡುವವರೆಗೆ  ಎಂದರೆ ಸುಮಾರು 1902 ರವರೆಗೆ ರಾಜ್ಯದ ರಾಜಪ್ರತಿನಿಧಿ ಆಗಿ ರಾಜ್ಯದ ಸಮಸ್ತ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು. ಜೂನ್ 6, 1900 ರಲ್ಲಿ ಕಥಿಯಾವರ್‌ನ ಮಹಾರಾಣಿ ಪ್ರತಾಪ ಕುಮಾರಿ ಅಮ್ಮಣ್ಣಿ ಅವರನ್ನು ವಿವಾಹವಾದರು.

ನಾಲ್ವಡಿ ಕೃಷ್ಣರಾಜ ಒಡೆಯರ್  ಹಾಗು ಮಹಾರಾಣಿ ಪ್ರತಾಪ ಕುಮಾರಿ ಅಮ್ಮಣ್ಣಿ ದಂಪತಿ. ಕೃಪೆ: ರಾಜ ರವಿ ವರ್ಮಾ 

ಮಹಾರಾಜ ಶ್ರೀ ನಾಲ್ವಡಿ  ಕೃಷ್ಣರಾಜ ಒಡೆಯರ್-IV – ಆಳ್ವಿಕೆ (1902-1940)

ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿಯಿಂದ ಫೆಬ್ರವರಿ 8, 1902 ರಂದು ಮೈಸೂರು ರಾಜ್ಯದ ಆಡಳಿತವನ್ನು ವಹಿಸಿಕೊಂಡರು. ನಂತರ  ಅವರು ಆಗಸ್ಟ್ 8, 1902 ರಂದು ಜಗನ್ಮೋಹನ ಅರಮನೆಯಲ್ಲಿ ಮೈಸೂರಿನ 24 ನೇ ಮಹಾರಾಜರಾಗಿ ಸಿಂಹಾಸನವನ್ನು ಏರಿದರು. ಅವರು 39 ವರ್ಷಗಳ ಕಾಲ ರಾಜ್ಯವನ್ನು ಆಳಿದರು, ಅವರ ಈ ಆಳ್ವಿಕೆಯ ಅವಧಿಯನ್ನು  ‘ಮೈಸೂರಿನ ಸುವರ್ಣಯುಗ’ ಎಂದು ಬಣ್ಣಿಸಲಾಗುತ್ತಿದೆ. 

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ನ್ನು ಗಾಂಧೀಜಿ ರಾಜಋಷಿ ಎಂದು ಉಲ್ಲೇಖಿಸಿದ್ದರು. ಬ್ರಿಟಿಷ್ ರು ಅವರನ್ನು ಚಕ್ರವರ್ತಿ ಅಶೋಕನಿಗೆ ಹೋಲಿಸಿದರು. ಅವರ ರಾಜ್ಯದ ಆಡಳಿತವು ಎಷ್ಟು ಪ್ರಸಿದ್ಧಿಯಾಗಿತ್ತೆಂದರೆ  ಭಾರತದ ಇತರ ಭಾಗಗಳಿಂದ ರಾಜಕುಮಾರರನ್ನು ತರಬೇತಿಗಾಗಿ ಮೈಸೂರಿಗೆ ಕಳುಹಿಸಲಾಗುತ್ತಿತ್ತು. ಮಹಾರಾಜ ನಾಲ್ವಡಿ  ಕೃಷ್ಣರಾಜ ಒಡೆಯರ್ ಅವರು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಿದರು ಮತ್ತು ಅವರ ಆಳ್ವಿಕೆಯಲ್ಲಿ ಹಲವಾರು ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್‌ಗಳನ್ನು ನಿರ್ಮಿಸಲಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್. ಕೃಪೆ: ಬರಹುನುದ್ದೀನ್, ಎಂ

ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆ  ಸುವರ್ಣಯುಗ

ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಅವಧಿಯಲ್ಲಿ  ಅನೇಕ ಕಾರಣಗಳಿಗಾಗಿ ಮೈಸೂರು   ವಿಶ್ವ ಪ್ರಸಿದ್ದಿ ಪಡೆಯಿತು.  ಬಡತನ ನಿರ್ಮೂಲನೆ ಮತ್ತು ಗ್ರಾಮೀಣ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದು ಅವರ ಮುಖ್ಯ ಕಾಳಜಿಯಾಗಿತ್ತು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕತೆಯು ಅವರ ಆಳ್ವಿಕೆಯಲ್ಲಿ ಪ್ರವರ್ಧಮಾನಕ್ಕೆ ಬಂದಿತು.

ಮಹಾರಾಜ ಕೃಷ್ಣರಾಜ ಒಡೆಯರ್  ಅಸ್ಪೃಶ್ಯತೆಯನ್ನು ಅಪರಾಧವೆಂದು ಪರಿಗಣಿಸಿದರು. ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಬಾಲ್ಯ ವಿವಾಹವನ್ನು ನಿಷೇಧಿಸಿದರು. ಅವರು ವಿಧವೆ  ಹುಡುಗಿಯರಿಗಾಗಿ ಹಲವಾರು ವಿದ್ಯಾರ್ಥಿವೇತನವನ್ನು ಸ್ಥಾಪಿಸಿದರು. 1915 ರಲ್ಲಿ ಮೈಸೂರು ಸಮಾಜದ ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಮೈಸೂರು ಸಾಮಾಜಿಕ ಪ್ರಗತಿ ಸಂಘವನ್ನು ರಚಿಸಲಾಯಿತು. ವಿಶೇಷ ಚೇತನ ಮಕ್ಕಳಿಗೆಂದು ವಿಶೇಷ ಅನುದಾನವನ್ನು ಮೀಸಲಿರಿಸಲಾಯಿತು.

1918 ರಲ್ಲಿ ಅವರು ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಸ್ಥಾನಮಾನ ಕಲ್ಪಿಸಲು ಮತ್ತು ಅದಕ್ಕೆ ಸಂಬಂಧಿಸಿದ ವರದಿಯನ್ನು ತಯಾರಿಸಲು  ಸರ್ ಲೆಸ್ಲಿ ಮಿಲ್ಲರ್ ಅವರನ್ನು ನೇಮಿಸಿದರು ಮತ್ತು ಬ್ರಾಹ್ಮಣೇತರರಿಗೆ ಸರ್ಕಾರಿ ಉದ್ಯೋಗಗಳಲ್ಲಿ 25% ಮೀಸಲಾತಿಯನ್ನು ಶಿಫಾರಸು ಮಾಡಿದರು. 1925 ರಲ್ಲಿ, ಅವರು ತಗಡೂರಿನ ಗ್ರಾಮಸ್ಥರಿಗೆ ಸಹಾಯ ಮಾಡಲು ಕಧಾರ ಸಹಕಾರ ಸಂಘವನ್ನು ಸ್ಥಾಪಿಸಿದರು. ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ ಅನ್ನು ಅವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾಯಿತು – ಭಾರತದಲ್ಲಿ ಇದು ಈ ರೀತಿಯಲ್ಲಿ ಸ್ಥಾಪನೆಯಾದ  ಮೊದಲ ಸಂಘ.

ಇವರ ಮಾರ್ಗದರ್ಶನದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಯಿತು, ಅವುಗಳಲ್ಲಿ ಹಲವು ಇಂದಿಗೂ ಪ್ರಸಿದ್ಧವಾಗಿವೆ. ಮೈಸೂರಿನ ಸಂಸ್ಕೃತ ಕಾಲೇಜಿಗೆ ಮಹಾರಾಜರು ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಅವರು  ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಸರ್ ಸಿವಿ ರಾಮನ್ ಅವರಿಗೆ 10 ಎಕರೆ ಭೂಮಿಯನ್ನು ಉಡುಗೊರೆಯಾಗಿ ನೀಡಿದರು.

1927 ರಲ್ಲಿ,  ಅವರ ಸಂಸ್ಥಾನದಲ್ಲಿ ಶಿಕ್ಷಣದ ಮೇಲೆ ಮಾಡಲಾದ ಒಟ್ಟು ವೆಚ್ಚವು 699,000 ರೂ.ಗಳಷ್ಟಿದ್ದು 1902 ರಲ್ಲಿ  4,680,000 ರೂ.ಗೆ ಏರಿತು. ಆ ಸಮಯದಲ್ಲಿ ಮೈಸೂರಿನಲ್ಲಿ ಒಟ್ಟು 8,000 ಶಾಲೆಗಳಿದ್ದು ಅದರಲ್ಲಿ  515,000 ವಿದ್ಯಾರ್ಥಿಗಳು ಕಲಿಯುತ್ತಿದ್ದರು.

ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ – ಗಮನಾರ್ಹ ಸಾಧನೆಗಳು

  • ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆ – 1902 ರಲ್ಲಿ ಮೈಸೂರು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದಾದ್ಯಂತ ಜಲವಿದ್ಯುತ್ ಉತ್ಪಾದಿಸುವ ಮೊದಲ ರಾಜ್ಯವಾಯಿತು.
  • ಮಿಂಟೋ ಕಣ್ಣಿನ ಆಸ್ಪತ್ರೆ – ಇದು ವಿಶ್ವದ ಅತ್ಯಂತ ಹಳೆಯ ಕಣ್ಣಿನ ಆಸ್ಪತ್ರೆಯಾಗಿದೆ. ಇದನ್ನು 1903 ರಲ್ಲಿ ಮಹಾರಾಜರ ಆಳ್ವಿಕೆಯಲ್ಲಿ ಸ್ಥಾಪಿಸಲಾಯಿತು.
  • ಬೆಂಗಳೂರಿನಲ್ಲಿ ಬೀದಿ ದೀಪಗಳು – ಆಗಸ್ಟ್ 5, 1905 ರಂದು ಬೆಂಗಳೂರಿನಲ್ಲಿ ಬೀದಿದೀಪಗಳನ್ನು ಪರಿಚಯಿಸಲಾಯಿತು. ಈ ಮೂಲಕ ಬೆಂಗಳೂರು ಬೀದಿ ದೀಪಗಳನ್ನು ಹೊಂದಿರುವ ಏಷ್ಯಾದ ಮೊದಲ ನಗರವಾಯಿತು.
  • ಉಭಯ ಸದನಗಳ ಸಭೆ – ನಾಲ್ವಡಿ ಕೃಷ್ಣ ರಾಜ ಒಡೆಯರ್ ರ ಮಾರ್ಗದರ್ಶನದಲ್ಲಿ, ಮೈಸೂರಿನ ಪ್ರತಿನಿಧಿ ಸಭೆಯನ್ನು ವಿಸ್ತರಿಸಲಾಯಿತು. 1907 ರಲ್ಲಿ, ವಿಧಾನಸಭೆಯು ಅದರ ಶಾಸಕಾಂಗ ಮಂಡಳಿಯನ್ನು ಸ್ಥಾಪಿಸುವುದರೊಂದಿಗೆ ಉಭಯ ಸದನವಾಯಿತು.
  • ಮಹಿಳೆಯರ ಮತದಾನದ ಹಕ್ಕು – ಅಮೆರಿಕ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಮಹಿಳೆಯರಿಗೆ ಮತದಾನ ಮಾಡಲು ಅವಕಾಶ ನೀಡುವ ಮುಂಚೆಯೇ, ಮೈಸೂರಿನಲ್ಲಿ ಮತದಾನ ಮಾಡುವ ಹಕ್ಕನ್ನು ಅವರಿಗೆ ನೀಡಲಾಯಿತು.
  • ಚಿತ್ರದುರ್ಗದ ವಾಣಿ ವಿಲಾಸ ಸಾಗರ್ ಅಣೆಕಟ್ಟು – 1907 ರಲ್ಲಿ ನಿರ್ಮಿಸಲಾದ ಪ್ರಥಮ ಅಣೆಕಟ್ಟು ಹಾಗು ಅಣೆಕಟ್ಟು ಕರ್ನಾಟಕದ ಮೊದಲ ಅಣೆಕಟ್ಟು ಎಂದು ಪ್ರಸಿದ್ಧಿಯಾಗಿದೆ.
  • ಮೈಸೂರು ಬಾಯ್ ಸ್ಕೌಟ್ಸ್ – 1909 ರಲ್ಲಿ ಪರಿಚಯಿಸಲಾದ ಈ ಕಾರ್ಯಕ್ರಮವು ಭಾರತದಲ್ಲಿ ಮೊದಲನೆಯದ್ದಾಗಿದ್ದು, ಇದನ್ನು ಪರಿಚಯಿಸಿದ ಕೀರ್ತಿ  ನಾಲ್ವಡಿ ಕೃಷ್ನರಾಜ ಒಡೆಯರ್‌ಗೆ ಸೇರುತ್ತದೆ.
  • ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ – 1911 ರಲ್ಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ್ನು ಕ್ರಿಯಾತ್ಮಕವಾಗಿ ಪ್ರಾರಂಭಿಸಲು 371 ಎಕರೆ ಭೂಮಿ ಮತ್ತು ಹಣವನ್ನು ಉಡುಗೊರೆಯಾಗಿ ನೀಡಲಾಯಿತು.

ಇತರ ಸಾಧನೆಗಳು

  • ಕಡ್ಡಾಯ ಪ್ರಾಥಮಿಕ ಶಿಕ್ಷಣ: ನಾಲ್ವಡಿ ಕೃಷ್ನರಾಜ ಒಡೆಯರ್‌ ಪ್ರಾಥಮಿಕ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿದರು ಮತ್ತು 1915 ರಲ್ಲಿ ಸಾರ್ವಜನಿಕ ಶಾಲೆಗಳಲ್ಲಿ ಜಾತಿ ತಾರತಮ್ಯವನ್ನು ತೊಡೆಯುಬೇಕೆಂಬ ಪ್ರಯತ್ನದಲ್ಲಿ ಶಾಲೆಗಳಿಗೆ ದಲಿತ ಮಕ್ಕಳಿಗೆ ಪ್ರವೇಶವನ್ನು ಪ್ರಾರಂಭಿಸಲು ನಿರ್ದೇಶಿಸಲಾಯಿತು.
  • ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 1913 ರಲ್ಲಿ ಸ್ಥಾಪನೆಯಾಯಿತು
  • ಬೆಂಗಳೂರು ಕೃಷಿ ವಿಶ್ವವಿದ್ಯಾಲಯವೂ 1913ರಲ್ಲಿ ಸ್ಥಾಪನೆಯಾಯಿತು
  • ಕನ್ನಡ ಸಾಹಿತ್ಯ ಪರಿಷತ್ತು ಇವರ ಅವಧಿಯಲ್ಲಿಯೇ  1915 ರಲ್ಲಿ ಸ್ಥಾಪನೆಯಾಯಿತು
  • 1916 ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾದರು.
  • ನಾಲ್ವಡಿ ಕೃಷ್ನರಾಜ ಒಡೆಯರ್‌ ಮೈಸೂರು ವಿಶ್ವವಿದ್ಯಾನಿಲಯವನ್ನು 1916 ರಲ್ಲಿ ಸ್ಥಾಪಿಸಿದರು.
  • ಮೈಸೂರು ಚೇಂಬರ್ ಆಫ್ ಕಾಮರ್ಸ್ 1916 ರಲ್ಲಿ ಅಸ್ತಿತ್ವಕ್ಕೆ ಬಂತು.
  • ವಿಶ್ವೇಶ್ವರಯ್ಯ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮೈಸೂರಿನಲ್ಲಿ ಮಹಿಳೆಯರಿಗಾಗಿ ಮಹಾರಾಣಿ ಕಾಲೇಜು 1917 ರಲ್ಲಿ ಸ್ಥಾಪಿಸಲಾಯಿತು.
  • ಶ್ರೀಗಂಧದ ಎಣ್ಣೆ ಕಾರ್ಖಾನೆಯನ್ನು 1917 ರಲ್ಲಿ ಪ್ರಾರಂಭಿಸಲಾಯಿತು
  • ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ 1923 ರಲ್ಲಿ ಕಾರ್ಯಾರಂಭಿಸಿತು.
  • KRS ಅಣೆಕಟ್ಟು – ಈ ಅಣೆಕಟ್ಟು ಮೈಸೂರಿನ ನೀರಾವರಿಗೆ ವ್ಯವಸ್ಥೆಗೆ ನಿರ್ಣಾಯಕವಾಗಿತ್ತು ಮತ್ತು ಮಹಾರಾಜರು ಯೋಜನೆಗೆ ಕುಟುಂಬದ ಆಸ್ತಿಗಳನ್ನು ಕೊಡುವುದಾಗಿ ವಾಗ್ದಾನ ಮಾಡಿದ ನಂತರ 1924 ರಲ್ಲಿ ನಿರ್ಮಿಸಲಾಯಿತು. ಆ ಸಮಯದಲ್ಲಿ, ಇದು ಏಷ್ಯಾದ ಅತಿದೊಡ್ಡ ಅಣೆಕಟ್ಟು ಆಗಿತ್ತು.
  • ಮೈಸೂರು ವೈದ್ಯಕೀಯ ಕಾಲೇಜನ್ನು 1924 ರಲ್ಲಿ ಪ್ರಾರಂಭವಾಯಿತು
  • ಮಾರ್ಕೋನಹಳ್ಳಿ ಅಣೆಕಟ್ಟು – 1930 ರಲ್ಲಿ ನಿರ್ಮಿಸಲಾದ ಈ ಅಣೆಕಟ್ಟು ಸ್ವಯಂಚಾಲಿತ ಸೈಫನ್ ವ್ಯವಸ್ಥೆಯನ್ನು ಹೊಂದಿರುವ ಏಷ್ಯಾದಲ್ಲಿಯೇ ಮೊದಲನೆ ಅಣೆಕಟ್ಟು.
  • ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು 1934 ರಲ್ಲಿ ಸ್ಥಾಪಿಸಲಾಯಿತು.
  • ಮೈಸೂರು ಪೇಪರ್ ಮಿಲ್ಸ್ 1936 ರಲ್ಲಿ ಸ್ಥಾಪನೆಯಾಯಿತು.
  • ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಅನ್ನು 1936 ರಲ್ಲಿ ಸ್ಥಾಪಿಸಲಾಯಿತು – ಈ ಕಂಪನಿಯು ಕರ್ನಾಟಕದಲ್ಲಿ ಪ್ರತಿ ಚುನಾವಣೆಯ ಸಮಯದಲ್ಲಿ ಬಳಸಲಾಗುವ ಅಳಿಸಲಾಗದ ಶಾಯಿಯನ್ನು ತಯಾರಿಸುತ್ತದೆ.
  • ಮಹಿಳೆಯರಿಗಾಗಿ ಮಹಾರಾಣಿ ಕಾಲೇಜನ್ನು 1938 ರಲ್ಲಿ ಸ್ಥಾಪಿಸಲಾಯಿತು.
  • ಹಾಸನದಲ್ಲಿ ಮೈಸೂರು ಇಂಪ್ಲಿಮೆಂಟ್ಸ್ ಕಾರ್ಖಾನೆಯನ್ನು 1939 ರಲ್ಲಿ ಪ್ರಾರಂಭಿಸಲಾಯಿತು.
  • ಹಿರೇಭಾಸ್ಕರ ಅಣೆಕಟ್ಟು – ಹಿರೇಭಾಸ್ಕರ ಅಣೆಕಟ್ಟನ್ನು 1939 ರಲ್ಲಿ ನಿರ್ಮಿಸಲಾಯಿತು. ಈ ಅಣೆಕಟ್ಟು 120 MW ವಿದ್ಯುತ್ ಉತ್ಪಾದಿಸುತ್ತದೆ.
  • ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ – ಕಂಪನಿಯು ಬಹಳ ವರ್ಷಗಳ  ನಂತರ ಅಸ್ತಿತ್ವಕ್ಕೆ ಬಂದರೂ, ಮಹಾರಾಜರು 1940 ರಲ್ಲಿಯೇ ಅದರ ಅಡಿಪಾಯವನ್ನು ಹಾಕಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್. ಮ್ಯಾಗ್ನ್ಯೂಸ್ ಮ್ಯಾಂಕ್ 

ಕಲಾಪೋಷಕ ಮಹಾರಾಜ ನಾಲ್ವಡಿ  ಶ್ರೀ ಕೃಷ್ಣರಾಜ ಒಡೆಯರ್-

ಕೃಷ್ಣರಾಜ ಒಡೆಯರ್ ಅವರು ಸ್ವತಃ ಕಲಾವಿದರಾಗಿದ್ದು, ಪಿಟೀಲು, ಕೊಳಲು, ಸಿತಾರ್, ವೀಣೆ, ಸ್ಯಾಕ್ಸೋಫೋನ್, ಮೃದಂಗಂ, ಪಿಯಾನೋ ಮತ್ತು ನಾದಸ್ವರಂ ಸೇರಿದಂತೆ ಹಲವಾರು ಸಂಗೀತ ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಅವರ ಪೂರ್ವಜರಂತೆ ಅವರು ಹಲವಾರು ಹಿಂದೂಸ್ತಾನಿ, ಕರ್ನಾಟಕ ಮತ್ತು ಪಾಶ್ಚಿಮಾತ್ಯ ಕಲಾವಿದರನ್ನು ಪೋಷಿಸಿದರು. ಮೈಸೂರು ಮಹಾರಾಜರ ಕೆಲವು ಗೌರವಾನ್ವಿತ ಅತಿಥಿಗಳಲ್ಲಿ ಗೌಹರ್ ಜಾನ್, ಅಬ್ದುಲ್ ಕರೀಂ ಖಾನ್ ಮತ್ತು ಆಗ್ರಾ ಘರಾನಾದ ಸದಸ್ಯರಾದ ಉಸ್ತಾದ್ ವಿಲಾಯತ್ ಹುಸೇನ್ ಖಾನ್ ಮತ್ತು ನಟ್ಟನ್ ಖಾನ್ ಸೇರಿದ್ದಾರೆ. ಬರ್ಕತುಲ್ಲಾ ಖಾನ್ ಅವರು 1919 ರಿಂದ 1930 ರವರೆಗೆ ಅರಮನೆಯಲ್ಲಿ ಸಂಗೀತಗಾರರಾಗಿದ್ದರು. ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದ ಪ್ರಚಾರಕ್ಕಾಗಿ ನಾಲ್ವಡಿ ಮಹಾರಾಜರು ಸಹ ಗುರುತಿಸಲ್ಪಟ್ಟರು. ಯೋಗದ ಅನೇಕ ಪ್ರಯೋಜನಗಳನ್ನು ಗುರುತಿಸಿ, ಮಹಾರಾಜರು ಶ್ರೀ ಟಿ.ಕೃಷ್ಣಮಾಚಾರ್ಯರನ್ನು ಪ್ರೋತ್ಸಾಹಿಸಿದರು, ಅವರು ಪಟ್ಟಾಭಿ ಜೋಯಿಸ್ ಮತ್ತು ಬಿಕೆಎಸ್ ಅಯ್ಯಂಗಾರ್ ಅವರಿಗೆ ಯೋಗ  ತರಬೇತಿ ನೀಡಿದರು.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್  – ಶೀರ್ಷಿಕೆಗಳು ಮತ್ತು ಗೌರವಗಳು

ಮಹಾರಾಜರಿಗೆ ಹಲವಾರು ಬಿರುದು ಮತ್ತು ಗೌರವಗಳನ್ನು ನೀಡಿ ಗೌರವಿಸಲಾಯಿತು. ಇವುಗಳಲ್ಲಿ ಪ್ರಮುಖವಾದುವುಗಳು ಇಲ್ಲಿವೆ 

• ಯುವರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್, ಮೈಸೂರಿನ ಯುವರಾಜ: 1884–1894

• ದೆಹಲಿ ದರ್ಬಾರ್ ಚಿನ್ನದ ಪದಕ: 1903

• ಹಿಸ್ ಹೈನೆಸ್ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್, ಮೈಸೂರು ಮಹಾರಾಜ: 1894–1907

• ನೈಟ್ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಇಂಡಿಯಾ:1907

• ಹಿಸ್ ಹೈನೆಸ್ ಮಹಾರಾಜ ಸರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್, ಮೈಸೂರು ಮಹಾರಾಜ : 1907-1910

• ದೆಹಲಿ ದರ್ಬಾರ್ ಚಿನ್ನದ ಪದಕ: 1911

• ದಂಡಾಧಿಕಾರಿ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಸೇಂಟ್ ಜಾನ್:1911

• ಕರ್ನಲ್ ಹಿಸ್ ಹೈನೆಸ್ ಮಹಾರಾಜ ಶ್ರೀ ಸರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್, ಮೈಸೂರು ಮಹಾರಾಜ: 1910-1917

• ನೈಟ್ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ : 1917

• ಕಿಂಗ್ ಜಾರ್ಜ್ V ರಜತ ಮಹೋತ್ಸವದ ಪದಕ: 1935

• ಕಿಂಗ್ ಜಾರ್ಜ್ VI ಪಟ್ಟಾಭಿಷೇಕ ಪದಕ: 1937

• ಕರ್ನಲ್ ಹಿಸ್ ಹೈನೆಸ್ ಮಹಾರಾಜ ಶ್ರೀ ಸರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್, ಮೈಸೂರು ಮಹಾರಾಜ: 1917-1940

Related Readings

Jolad Rotti:
Related Post