X

ಹಂಪಿಯ ಬಗ್ಗೆ ನಿಮಗೆ ತಿಳಿದಿರದ ೧೦ ಸಂಗತಿಗಳು!

    Categories: Hampi

ಹಂಪಿಯನ್ನು ಕರ್ನಾಟಕದಲ್ಲಿ ಕೆಲವೊಮ್ಮೆ ಹಾಳು ಹಂಪಿ ಎಂದು ಕೂಡ ಕರೆಯುತ್ತಾರೆ. ಕಾರಣ, ವಿಜಯ ನಗರ ಅರಸರ ರಾಜಧಾನಿಯಾಗಿದ್ದ ಈ ನಗರ ಈಗ ನಾಶಗೊಳಿಸಲ್ಪಟ್ಟ  ಅವಶೇಷಗಳ  ಒಂದು ಪಟ್ಟಣವಾಗಿ ಉಳಿದಿದೆ.  ಆದರೆ ಇಲ್ಲಿನ ಕರಕುಶಲತೆ, ಶಿಲ್ಪಿ ಕಲಾ ಸೌಂದರ್ಯ ಎಷ್ಟೊಂದು ಪ್ರಸಿದ್ಧವಾಗಿದೆಯೆಂದರೆ, ಇದಕ್ಕೆ ಯುನೆಸ್ಕೋ  ವಿಶ್ವ ಪರಂಪರೆಯ ತಾಣದ 

ಮಾನ್ಯತೆ ನೀಡಿದೆ.  ಹಂಪಿಯು  ಭಾರತದ ಅತ್ಯಂತ ಪ್ರಸಿದ್ಧ ಪುರಾತತ್ವ ಕೇಂದ್ರಗಳಲ್ಲಿ ಒಂದಾಗಿದ್ದು ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು, ಇತಿಹಾಸ ಪ್ರಿಯರು ಭೇಟಿ ನೀಡುತ್ತಾರೆ. ಹಂಪಿ ಪಟ್ಟಣ ಅತ್ಯಂತ ದೂರದ ಪ್ರದೇಶದಲ್ಲಿರುವ ಒಂದು ಏಕಾಂತದ  ನಗರ ಎಂದರೂ ತಪ್ಪಾಗಲಾರದು. ಹಂಪಿ ಎಂದ ಕೂಡಲೇ ನಮ್ಮ ಕಣ್ಮುಂದೆ ಸುಳಿಯುವುದು ಅಲ್ಲಿನ ಪ್ರಸಿದ್ಧ ವಿಜಯ ನಗರ     ರಾಜಮನೆತನ, ಕಲ್ಲಿನಲ್ಲಿ ಅರಳಿ ನಿಂತ  ದೇವಾಲಯಗಳು, ಕಲಾ ಕುಸುರಿಯಿಂದಲೇ ಕಣ್ಮನ ಸೆಳೆಯುವ   ಗೋಪುರಗಳು, ವಿಶಾಲ   ರಸ್ತೆಗಳು ಮತ್ತು ಪ್ರತಿಮೆಗಳು. ಇವೆಲ್ಲವೂ   ಈ ನಗರದಾದ್ಯಂತ  ಪಸರಿಸಿ ನಿಂತಿವೆ. ಈ  ಪಾರಂಪರಿಕ ತಾಣ ದೇಶದ ಪ್ರಮುಖ ನದಿಗಳಲ್ಲೊಂದಾದ  ತುಂಗಭದ್ರಾ ನದಿಯ ದಂಡೆಯಲ್ಲಿ ಬೆಳೆದು ನಿಂತಿದೆ.  ವರ್ಷದ ಪ್ರತಿ ದಿನಗಳಲ್ಲೂ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿರುತ್ತದೆ. 

ಇಷ್ಟೆಲ್ಲ ವಿಶ್ವ ವಿಖ್ಯಾತವಾಗಿರುವ ಹಂಪಿಯ ಕೆಲವು ಸಂಗತಿಗಳು ಇನ್ನು  ಹೊರ ಜಗತ್ತಿಗೆ ಅಷ್ಟಾಗಿ ತಿಳಿದಿಲ್ಲ. ನೀವು ಹಂಪಿಗೆ ಭೇಟಿ ನೆಡುವ ಸಂದರ್ಭದಲ್ಲಿ ಈ ಸಂಗತಿಗಳನ್ನು ತಿಳಿದರೆ ನಿಮ್ಮ ಪ್ರವಾಸ ಇನ್ನಷ್ಟು ಅರ್ಥಪೂರ್ಣವಾಗಬಲ್ಲದು. ಈ ಸಂಗತಿಗಳ ಮೇಲೊಂದು ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. 

ವಿಜಯ ವಿಠ್ಠಲ ದೇಗುಲದ ಕಲ್ಲಿನ ರಥ

1. ಸಂಗೀತ ಸ್ತಂಭಗಳು

ಹಂಪಿ ಎಂದ ಕೂಡಲೇ ನಮ್ಮ ಕಿವಿಗಳು ಚುರುಕಾಗುತ್ತವೆ. ಕಾರಣ ಇಲ್ಲಿನ ಅಪರೂಪದ ಸಂಗೀತ 

 ಸ್ತಂಭಗಳು. ಹಂಪಿಯ ಪ್ರಮುಖ ದೇಗುಲಗಳಲ್ಲೊಂದು  ವಿಜಯ ವಿಠ್ಠಲ ದೇಗುಲ. ಈ ದೇವಾಲಯವು ಅದ್ಭುತ ವಾಸ್ತುಶಿಲ್ಪಕ್ಕೆ, ಕಲ್ಲಿನ ಕುಸುರಿ ಕೆಲಸಗಳಿಗೆ  ಹೆಸರುವಾಸಿಯಾಗಿದೆ. ಇಲ್ಲಿ ಈ  ಸಂಗೀತ  ಸ್ತಂಭಗಳಿವೆ.  ಈ  ಸ್ತಂಭಗಳು  ವಾಸ್ತುಶಿಲ್ಪದ ಮಹಾನ್    ಅದ್ಭುತಗಳಲ್ಲೊಂದು.   ಇಲ್ಲಿ ೫೬ ಸಂಗೀತ  ಸ್ತಂಭಗಳು ಇವೆ.  ಈ ಸ್ತಂಭಗಳನ್ನು  ಅತ್ಯಂತ  ಸೂಕ್ಷ್ಮವಾಗಿ ತಟ್ಟಿದಾಗ (ಟ್ಯಾಪ್ ಮಾಡಿದಾಗ) ಸುಮಧುರ ಶಬ್ದಗಳ ಅಲೆ  ಸೃಷ್ಟಿಯಾಗುತ್ತವೆ.  ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ  ಕಲ್ಲುಗಳನ್ನು ಬಳಸಿ  

ಈ  ಸ್ತಂಭಗಳನ್ನು ನಿರ್ಮಿಸಲಾಗಿದೆ. ಈ ಕಾರಣದಿಂದ   ವಿಜಯ ವಿಠ್ಠಲ  ದೇವಾಲಯದ ಮುಖ್ಯ   

ಸ್ತಂಭಗಳನ್ನು ಸ ರೇ ಗ ಮಾ   ಸ್ತಂಭಗಳು ಎಂದೂ ಬಣ್ಣಿಸಲಾಗುತ್ತದೆ. 

ಸಂಗೀತ ಸ್ತಂಭಗಳು: ಚಿತ್ರಕೃಪೆ : ವಿನಾಯಕ ಕುಲಕರ್ಣಿ

2. ವಾಸ್ತುಶಿಲ್ಪದ ವೈಭವ 

ಹಂಪಿ ಒಂದು ಸ್ಮಾರಕ ಪ್ರದೇಶ. ಈ ಪಟ್ಟಣದ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ದೈತ್ಯಾಕಾರದ ಕಲ್ಲು ಬಂಡೆಗಳಿವೆ. ಈ ಹಂಪಿ ಸ್ಮಾರಕಗಳನ್ನು ಕೂಡ ಈ ಕಲ್ಲು ಬಂಡೆಗಲ್ಲಿಯೇ ಕೆತ್ತಲಾಗಿದೆ.  ಆ ಕಾಲದ ವಾಸ್ತುಶಿಲ್ಪಿಗಳು  ಈ ದೈತ್ಯಾಕಾರದ ಕಲ್ಲುಗಳನ್ನು  ಕತ್ತರಿಸಿ ಅವುಗಳಿಗೆ ನಾನಾ ರೂಪ ನೀಡಿ, ಅವುಗಳಿಗೆ ಜೀವ ತುಂಬಿದ್ದಾರೆ.   ಹೀಗೆ ಕೆತ್ತನೆ ಸಂದರ್ಭದಲ್ಲೂ ಒಂದು ಕುತೂಹಲಕಾರಿ ತಂತ್ರವನ್ನು ಅನುಸರಿಸಲಾಗಿದೆ. 

ದೊಡ್ಡ ದೊಡ್ಡ ಬಂಡೆಗಳನ್ನು ಕತ್ತರಿಸಿ ಇಂತಹ ಅಮೂಲ್ಯ ಕಲಾಕುಸುರಿ ಕೆಲಸ ನಿರ್ವಹಿಸುವುದು ಸುಲಭದ ಸಂಗತಿಯಲ್ಲ. ಅದಕ್ಕಾಗಿ ಮೊದಲಿಗೆ,  ಬಂಡೆಗಳನ್ನು    ಕತ್ತರಿಸಲಾಯಿತು. ಬಳಿಕ, ಈ  ಕಲ್ಲುಗಳ  ಮೇಲ್ಮೈಯಲ್ಲಿ ರಂಧ್ರಗಳನ್ನು  ಮಾಡಲಾಯಿತು. ನಂತರ ಒಣಗಿದ ಮರದ ತುಂಡುಗಳನ್ನು ಈ  ಕಲ್ಲಿಗೆ ಹಾಕಲಾಯಿತು.  ಹೀಗೆ ನಿಲ್ಲಿಸಲಾದ ಗೂಟಗಳ ಮೇಲೆ ನೀರನ್ನು ಸುರಿಯಲಾಗುತ್ತಿತ್ತು.

ಮರದ ಗೂಟಗಳು ನೀರಿನಿಂದ ಸಂಪೂರ್ಣವಾಗಿ ಮುಳುಗುವುದರಿಂದ, ಅವುಗಳ ಗಾತ್ರವು ವಿಸ್ತರಿಸಲ್ಪಡುತ್ತದೆ  ಇದರಿಂದ ಕಲ್ಲುಗಳು ಒಡೆಯುತ್ತವೆ. ಬಳಿಕ ಅಗತ್ಯವಾದ ಆಕೃತಿಗೆ ಅನುಗುಣವಾಗಿ ಕೆತ್ತನೆ ಕೆಲಸ ಮಾಡಲಾಗುತ್ತಿತ್ತು.

3.  ಹಂಪಿ ನಿರ್ಮಾಣಗೊಂಡ ವರ್ಷ ಹಾಗು ಅದರ ಹೆಸರಿನ ಇತಿಹಾಸ 

ಹಂಪಿ ಎಂದ ಕೂಡಲೇ ನಮ್ಮಲ್ಲಿ ಮೂಡುವ ಒಂದು ತಪ್ಪು ಕಲ್ಪನೆಯೆಂದರೆ ಇದನ್ನು ವಿಜಯ ನಗರ ಅರಸರು ಕಟ್ಟಿಸಿದ್ದಾರೆ ಎಂಬುದು. ಇದು ನಿಜಕ್ಕೂ ಒಂದು ತಪ್ಪು ಮಾಹಿತಿ. ಈ ವಿಜಯ ನಗರ ಸಾಮ್ರಾಜ್ಯ ಆಡಳಿತಕ್ಕೆ ಬರುವ ಮುನ್ನವೇ ಹಂಪಿ ಹೆಸರು ಎಲ್ಲೆಡೆ ಪ್ರಚಲಿತದಲ್ಲಿತ್ತು. ಹಂಪಿಗೆ ಸಂಬಂಧಿಸಿ ಅತ್ಯಂತ ಹಳೆಯ ದಾಖಲೆಗಳು ನಮ್ಮನ್ನು ೧ ನೇ ಶತಮಾನಕ್ಕೆ ಕರೆದೊಯ್ಯುತ್ತವೆ. ಇದಕ್ಕಿಂತಲ್ಲೂ ಹಿಂದೆ, ಕ್ರಿಸ್ತ ಪೂರ್ವ ಯುಗದಲ್ಲಿ, ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲಿ ಇದು ಅಶೋಕ ಚಕ್ರವರ್ತಿಯ ರಾಜ್ಯಪಾಲರ ಅಡಿಯಲ್ಲಿದ್ದ ನಗರ ಎಂಬ ಬಗ್ಗೆ ದಾಖಲೆಗಳಿವೆ. 

ಪುರಾಣಗಳಲ್ಲಿ, ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಗೆ ಮುನ್ನ ಈ ಹಂಪಿಯನ್ನು ಸಾಂಪ್ರದಾಯಿಕವಾಗಿ ಕಿಷ್ಕಿಂದ ಕ್ಷೇತ್ರ, ಪಂಪ ಕ್ಷೇತ್ರ ಅಥವಾ ಭಾಸ್ಕರ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು.  ತುಂಗಭದ್ರಾ ನದಿಯ ದಕ್ಷಿಣ ದಂಡೆಯಲ್ಲಿ ಅರಳಿ ನಿಂತ ನಗರ ಹಂಪಿ.  ಈ ನಗರಕ್ಕೆ ಈ ಹೆಸರು ಬಂದಿರುವುದು ಈ ನದಿಯ ಕಾರಣಕ್ಕೆ. ಈ ಹಂಪಿ ಶಬ್ದದ ಮೂಲ ಕನ್ನಡ ಪಂಪ ಎಂಬುದಾಗಿದೆ.  ಪಂಪ ಎಂಬ ಶಬ್ದವೇ ಬಳಿಕ ಹಂಪಿಯಾಗಿ ರೂಪಾಂತರಗೊಂಡಿದೆ. ಇದು ನಿಜಕ್ಕೂ ಹಂಪಿಯ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯಾಗಿದೆ, ಅಲ್ಲವೇ?

4. ಅಮೂಲ್ಯ ಪುರಾತತ್ವ ವಸ್ತು ಸಂಗ್ರಹಾಲಯ 

ಹಂಪಿಯ ಕಮಲಾಪುರದಲ್ಲಿರುವ ಪುರಾತತ್ವ ಇಲಾಖೆಯ ಕಚೇರಿಯಲ್ಲಿರುವ ಕೃಷ್ಣ ದೇವರಾಯನ ಮಡದಿಯ ಶಿಲ್ಪಿ: ಚಿತ್ರ ಕೃಪೆ: ವಿಕಿರಣ್ _ ೨೦೦೦

ಹಂಪಿ ಭೇಟಿಗೆ ತೆರಳುವ ಬಹುತೇಕ ಮಂದಿಗೆ ಅಲ್ಲಿನ ಅತ್ಯಂತ ಅಮೂಲ್ಯವಾದ ಪುರಾತತ್ವ ವಸ್ತು ಸಂಗ್ರಹಾಲಯದ ಬಗ್ಗೆ ತಿಳಿದಿಲ್ಲ. ಈ ವಸ್ತು ಸಂಗ್ರಹಾಲಯದಲ್ಲಿ ವಿಜಯ ನಗರ    ಸಾಮ್ರಾಜ್ಯದ   ಕುರುಹುಗಳು ಮತ್ತು ಅವಶೇಷಗಳನ್ನು ಸಂರಕ್ಷಿಸಲಾಗಿದೆ. ಆ ಕಾಲದ ಹಲವಾರು ಮಹತ್ವ ಸಂಗತಿಗಳನ್ನು ಈ ಅವಶೇಷಗಳನ್ನು ನೋಡಿ ತಿಳಿದುಕೊಳ್ಳ ಬಹುದು.  ಇಲ್ಲಿ   ದುರ್ಗಾ ಮಾತೆಯ ಹಲವಾರು  ಅಮೂಲ್ಯ  ಚಿತ್ರಗಳಿವೆ.  ಇದಲ್ಲದೆ ವಿಜಯನಗರದ  ಉಗ್ರ ನರಸಿಂಹಗೆ ಜೋಡಿಯಾದ  ಲಕ್ಷ್ಮಿ ಪ್ರತಿಮೆ ಕೂಡ ಇಲ್ಲಿನ ಇನ್ನೊಂದು ದೊಡ್ಡ ಆಕರ್ಷಣೆ. 

ಈ ಐತಿಹಾಸಿಕ ವಸ್ತುಸಂಗ್ರಹಾಲಯದ  ಅಂಗಳ ಎನ್ನ ಬಹುದಾದ ಪ್ರದೇಶದಲ್ಲಿ  ಇಡೀ ವಿಜಯನಗರದ ಒಂದು ದೊಡ್ಡ ಮಾದರಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಹಂಪಿಯ  ಇತಿಹಾಸದ ಎಲ್ಲ ಮಾಹಿತಿಗಳಿವೆ. ಶಿಲಾಯುಗದಿದ ಆರಂಭಗೊಂಡು  ಇತ್ತೀಚಿನವರೆಗಿನ  ವಿವರವಾದ ಇತಿಹಾಸವನ್ನು ಅದರಲ್ಲಿ ಕಾಣಬಹುದು.  ಇಂತಹ ಅಪರೂಪದ  ಮ್ಯೂಸಿಯಂ ಬಗ್ಗೆ ಹೆಚ್ಚಿನ ಪ್ರವಾಸಿಗರಿಗೆ ಮಾಹಿತಿ ಇಲ್ಲದಿರುವುದರಿಂದ, ಅವರು ತಮ್ಮ ಹಂಪಿ ಭೇಟಿ ವೇಳೆ ಅಲ್ಲಿಗೆ ಭೇಟಿ ನೀಡುವುದಿಲ್ಲ. ಇದು ವಿಜಯನಗರ ಸಾಮ್ರಾಜ್ಯದ ಅವಶೇಷಗಳ ನಡುವೆಯೇ ಇದೆ. ಅಲ್ಲಿನ ಪ್ರಮುಖ ನಗರ  ಹೊಸಪೇಟೆ ಪಟ್ಟಣಕ್ಕೆ ಇದು  ಹತ್ತಿರದಲ್ಲಿದೆ.

5. ರಾಮಾಯಣದ ಆಕರ್ಷಣೆ 

ಹಜಾರಾ ರಾಮ ದೇವಾಲಯದ ಹೊರಗಿನ ಗೋಡೆ, ಹಂಪಿ. ಚಿತ್ರಕೃಪೆ ದಿನೇಶ್ ಕನ್ನಂಬಾಡಿ

ಹಂಪಿಯ ಪ್ರಸಿದ್ಧ ದೇಗುಲಗಳಲ್ಲೊಂದು ಅಲ್ಲಿನ ಹಜಾರಾ ರಾಮ  ದೇವಾಲಯ. ಶ್ರೀ ರಾಮ  ಮತ್ತು ಶ್ರೀ  ಕೃಷ್ಣನ ಕಾಲದಲ್ಲಿ ಇದ್ದವು ಎನ್ನಲಾದ    ಹಲವಾರು  ಐತಿಹಾಸಿಕ ವಸ್ತುಗಳು ಮತ್ತು ಪಳೆಯುಳಿಕೆಗಳು ಇಲ್ಲಿ  ಇರುವುದರಿಂದ ಈ ದೇವಾಲಯವು ಜನಪ್ರಿಯತೆಯನ್ನು ಗಳಿಸಿದೆ. ಈ  ದೇವಾಲಯದ ಹೊರ ಗೋಡೆಗಳಲ್ಲಿ ಸಂಪೂರ್ಣವಾಗಿ ರಾಮಾಯಣವನ್ನು  ನಿರೂಪಿಸಲಾಗಿದೆ. ಇದನ್ನು ಪುರಾತನ ವಸ್ತುಗಳಿಂದ ಕೆತ್ತಲಾಗಿದೆ ಮತ್ತು ಅಲಂಕರಿಸಲಾಗಿದೆ. ಈ ನಿರೂಪಣೆ   ಭಗವಾನ್ ಶ್ರೀ  ರಾಮನ ಕಥೆಯನ್ನು ಸುಂದರವಾಗಿ ಹೇಳುತ್ತದೆ. 

ಈ ದೇವಾಲಯದಲ್ಲಿ ಇರುವ ಪಳೆಯುಳಿಕೆಗಳು ಮತ್ತು ಪುರಾತನ ವಸ್ತುಗಳು ಇಡೀ ಭಾರತದಲ್ಲಿ ಕಂಡುಬರುವ ಅಪರೂಪದ ವಸ್ತುಗಳು ಎಂದು ಹೇಳಲಾಗಿದೆ. ಖಂಡಿತವಾಗಿಯೂ ಈ ಅಂಶ ಬಹುತೇಕರಿಗೆ ತಿಳಿದಿಲ್ಲ. 

6. ತುಂಟತನದ ಆನೆ ಮರಿ! 

ಹಂಪಿಯ ಅತಿ ಪ್ರಮುಖ ಆಕರ್ಷಣೆಯಾದ ವಿರೂಪಾಕ್ಷ ದೇವಸ್ಥಾನದ ಎಡಭಾಗದ ಎರಡನೇ ಗೋಪುರವನ್ನು ಪ್ರವೇಶಿಸಿದಾಗ ನಾವು ಒಂದು ಮರಿಯಾನೆಯನ್ನು ನೋಡ ಬಹುದಾಗಿದೆ. ಇದಕ್ಕೆ ನಾವು ಒಂದು ರೂಪಾಯಿ ನಾಣ್ಯವನ್ನು ನೀಡಿದರೆ, ಅದು ತನ್ನ ಸೊಂಡಿಲಿನಿಂದ ಹಣ ಸಂಗ್ರಹಿಸಿ ಆಶೀರ್ವಾದದ ರೂಪದಲ್ಲಿ  ತಲೆಯನ್ನು  ಚುಂಬಿಸುತ್ತದೆ.

7. ತಲೆಕೆಳಗಾದ ಗೋಪುರದ ಛಾಯೆ 

ಹಂಪಿಯ ವೀಕ್ಷಣಾ ಗೋಪುರ

ಈ ತಲೆ ಬರಹ ನೋಡಿ ನಿಮಗೆ ಅಶ್ಚರ್ಯ ವಾಗಬಹುದು. ಆದರೆ ಇಂತಹ ಒಂದು ವಿಶಿಷ್ಟ ಸಂಗತಿಯೊಂದು ಹಂಪಿಯಲ್ಲಿ ನಡೆಯುತ್ತದೆ. ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವಾಲಯದ ಪ್ರಮುಖ ಗರ್ಭಗೃಹದ ಹಿಂದೆ ಒಂದು ಮೆಟ್ಟಿಲು ಇದೆ.  ಇದು ದೇವಾಲಯದ ಹಿಂಭಾಗದ ನಿರ್ಗಮನದ ಕಡೆಗೆ ಹೋಗುತ್ತದೆ. ಬಲಭಾಗದಲ್ಲಿ ನಿರ್ಗಮಿನ ದ್ವಾರಕ್ಕಿಂತ   ಮೊದಲು ಗೋಡೆ ಪಕ್ಕ ಒಂದು  ಡಾರ್ಕ್ ಚೇಂಬರ್ ಇದೆ. ಇದಕ್ಕೆ ಗೋಡೆಯಲ್ಲೇ ಸಣ್ಣ ಕಿಟಕಿ ನಿರ್ಮಿಸಲಾಗಿದೆ.    ಸೂರ್ಯನ ಕಿರಣಗಳು  ಈ ಕಿಟಕಿಯ  ಮೂಲಕ ಸಾಗಿ ಪಶ್ಚಿಮ ಗೋಡೆಯ ಮೇಲೆ ಬೀಳುವಾಗ , ತಲೆಕೆಳಗಾದ ಮುಖ್ಯ ಗೋಪುರವು ಚಿತ್ರದಲ್ಲಿನ ನೆರಳಿನಂತೆ ಗೋಚರಿಸುತ್ತದೆ. 

8. ಆಹಾರ ಪ್ರಿಯ ಗಣೇಶ!

ಸಾಸಿವೆ ಕಾಲು ಗಣಪತಿ ದೇಗುಲ, ಹಂಪಿ. ಚಿತ್ರ ಕೃಪೆ: ಅರುಣ್

ಗಣಪತಿ ಎಂದ ಕೂಡಲೇ ನಮ್ಮ ಕಣ್ಣ ಮುಂದೆ ಸುಲಿಯುವುದು ಡೊಳ್ಳು   ಹೊಟ್ಟೆಯ ಗಣ ನಾಯಕ. ಈ ನಮ್ಮೆಲ್ಲರ ಅಚ್ಚುಮೆಚ್ಚಿನ ಗಣಪತಿ ದೇವರ ಡೊಳ್ಳು ಹೊಟ್ಟೆಯ ಬಗ್ಗೆ ಒಂದು ದೊಡ್ಡ ಕಥೆ ಇದೆ. ಒಂದು ದಿನ ಅತಿಯಾಗಿ ತಿಂದು, ಗಣೇಶ ದೇವರ ಹೊಟ್ಟೆಯು ಇನ್ನೇನು ಬಿರಿಯುವಂತೆ ಆಗಿತ್ತು.  ಏಕೆಂದರೆ ಅಂದು ಆತ ತನ್ನ ನೆಚ್ಚಿನ ಊಟವನ್ನು  ಅತಿಯಾಗಿ ಮಾಡಿದ್ದರು.

ಈಗ ಹೊಟ್ಟೆ ಬಿರಿಯುವುದನ್ನು ತಪ್ಪಿಸಿಕೊಳ್ಳಲು ಗಣೇಶನಿಗಿದ್ದ ಏಕೈಕ ಉಪಾಯವೆಂದರೆ, ಹಾವಿನಿಂದ ಹೊಟ್ಟೆಯನ್ನು ಕಟ್ಟಿಕೊಳ್ಳುವುದು.  ಕೊನೆಗೆ ಹಾಗೆ ಮಾಡಿದರು  ಗಣೇಶನು. ತನ್ನ ಹೊಟ್ಟೆ ಬಿರಿಯುವುದನ್ನು ತಪ್ಪಿಸಿಕೊಳ್ಳಲು ಅವರು  ಹೊಟ್ಟೆಯ ಮೇಲೊಂದು ಹಾವನ್ನು ಕಟ್ಟಿಕೊಂಡರು. ಹಂಪಿಯ ಸಾಸಿವೆ ಕಾಳು ಗಣಪತಿ  ದೇವಾಲಯದಲ್ಲಿನ ಗಣೇಶನ ಪ್ರತಿಮೆಯ ವಿಶಿಷ್ಟ ವಿನ್ಯಾಸದ ಹಿಂದಿನ ಕಾರಣ ಈ ಕಥೆ.

ಹಂಪಿಯ ಅತಿ ಪ್ರಸಿದ್ಧ ದೇಗುಲಗಳಲ್ಲಿ ಇದು ಒಂದು.  ಗಣೇಶನು ಇಲ್ಲಿ ಚತುರ್ಭುಜ ಅವತಾರಿ.   ಈ ವಿಗ್ರಹದಲ್ಲಿ ಗಣೇಶನ ಒಂದು ಕೈನಲ್ಲಿ ಪಾಶವಿದೆ. ಇನ್ನೊಂದು ಕೈನಲ್ಲಿ ಭಕ್ತರಿಗೆ ಆಶೀರ್ವಾದ ಮಾಡುತಿದ್ದರೆ. ಮೂರನೇ ಕೈನಲ್ಲಿ ಮೋದಕವಿದೆ. ನಾಲ್ಕನೇ ಕೈನಲ್ಲಿ ಮುರಿದ ದಂತವಿದೆ.  ಈ ವಿಗ್ರಹದ ಇನ್ನೊಂದು ವೈಶಿಷ್ಟ್ಯತೆ ಎಂದರೆ ಅದನ್ನು ಏಕಶಿಲೆಯಿಂದ ಕೆತ್ತಲಾಗಿದೆ. ಇದು ಸುಮಾರು ೮  ಅಡಿ ಎತ್ತರವಿದೆ.  ವಾಸ್ತವವಾಗಿ,  ಈ ವಿಗ್ರಹದ ಬಗ್ಗೆ ಹೆಚ್ಚಿನ  ಮಾಹಿತಿ ಯಾರಿಗೂ ಇಲ್ಲ. 

9. ರಾಜಕುಟುಂಬದ ಆವರಣ 

ರಾಜ ಕುಟುಂಬದ ಕಟ್ಟಡಗಳಲ್ಲಿನ ಕೆತ್ತನೆಗಳು. ಚಿತ್ರ ಕೃಪೆ: ಸೋಹಂ ಬ್ಯಾನರ್ಜಿ

ಹಂಪಿಯಲ್ಲಿ ರಾಜ ಕುಟುಂಬ ವಾಸಿಸುತ್ತಿದ್ದ ಪ್ರದೇಶವನ್ನು ರಾಯಲ್ ಎನ್ ಕ್ಲೊಸರ್ ಎಂದು ಕರೆಯಲಾಗುತ್ತದೆ. ಇಲ್ಲಿ  ವಿಜಯನಗರ ಸಾಮ್ರಾಜ್ಯದ ರಾಜಮನೆತನದ ಸದಸ್ಯರು ವಾಸಿಸುತ್ತಿದ್ದರು.   ಈ ಆವರಣವು ೫೯,೦೦೦ ಚದರ ಮೀಟರ್ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಈ ಆವರಣದಲ್ಲಿ  ಏಕಕಾಲದಲ್ಲಿ ಸುಮಾರು ೪೩  ಮನೆಗಳನ್ನು ಹೊಂದಬಹುದು. ಹಲವು ತಲೆಮಾರುಗಳ ಕಾಲ ರಾಜ ಮನೆತನದ ಸದಸ್ಯರು ಇಲ್ಲಿ ವಾಸಿಸುತ್ತಿದ್ದರು.  ಈ ಸ್ಥಳದ ವಿಶೇಷವೆಂದರೆ  ಇದರ   ಮಧ್ಯ ಭಾಗದಲ್ಲಿರುವ  ಕಮಲ ಮಹಲ್.

ಈ ಮಹಲ್ ಅನ್ನು ವಿಜಯನಗರ ಸಾಮ್ರಾಜ್ಯದ ರಾಣಿಯರು ಮತ್ತು  ರಾಜ ಮನೆತನದ ಇತರ  ಮಹಿಳೆಯರಿಗಾಗಿ ನಿರ್ಮಿಸಲಾಗಿತ್ತು. ಈ  ಆವರಣದ ಹೆಚ್ಚಿನ ಭಾಗಗಳು  ಆಕ್ರಮಣಕೋರರ ಧಾಳಿಯಲ್ಲಿ ನಾಶಗೊಂಡಿವೆ. ಆದರೂ ಆ ಕಾಲದ ರಾಜಮನೆತನದ, ಅರಮನೆಯ  ಕುರುಹುಗಳು ನೋಡುಗರ ಕಣ್ಮನ ಸೆಳೆಯುತ್ತವೆ. 

10.  ಹಂಪಿಯ ವಿಶಾಲ ಮಾರುಕಟ್ಟೆ 

ಹಂಪಿಯ ಮಾರುಕಟ್ಟೆ ಚಿತ್ರ: ಚಿತ್ರಕೃಪೆ : ಉತ್ಪಲ್ ಬಸು

ಹಂಪಿಯ ಇತಿಹಾಸ ಓದುವಾಗ ಅಲ್ಲಿ, ವರ್ತಕರು ಚಿನ್ನ- ವಜ್ರಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬರುತ್ತದೆ. ಇಂತಹ, ಹಂಪಿ ಬಜಾರ್ ಅಲ್ಲಿನ ಪ್ರಸಿದ್ಧ 

ವಿರೂಪಾಕ್ಷ ದೇವಾಲಯದ ಮುಂಭಾಗದಲ್ಲಿ ಸುಮಾರು  ಒಂದು ಕಿಲೋಮೀಟರ್ ಹರಡಿಕೊಂಡಿದೆ.  ಈ ಸಂತೆ  ರಸ್ತೆಯ  ಎರಡೂ ಬದಿಗಳಲ್ಲಿ ಹಳೆಯ ಮಂಟಪಗಳಿವೆ.  ಈ ಮಂಟಪಗಳನ್ನು ಮೊದಲು ವರ್ತಕರು ಬಳಸುತ್ತಿದ್ದರು ಎನ್ನಲಾಗುತ್ತದೆ. ಈ ರಸ್ತೆ ಎರಡೂ ಬದಿಗಳ ನೋಟ ಅತ್ಯಾಕರ್ಷಕವಾದದ್ದು.  

ಬೆಳಗ್ಗಿನ ಜಾವ ಈ ರಸ್ತೆಯಲ್ಲಿ  ಸುತ್ತಾಡುವ ಅನುಭವ ನಮಗೆ ಅತ್ಯಂತ ಖುಷಿಕೊಡುವಂತಹುದು. ಲೋಹದ ಶೀಟ್ ನಿಂದ  ಅಲಂಕರಿಸಲ್ಪಟ್ಟ ಮರದ ರಥವನ್ನು  ರಸ್ತೆಯ ಮಧ್ಯ ಭಾಗದಲ್ಲಿ ನಿಲ್ಲಿಸಲಾಗಿದೆ.   ವಾರ್ಷಿಕ ರಥೋತ್ಸವದ  ಸಮಯದಲ್ಲಿ, ಈ ರಥವನ್ನು  ಎಳೆಯುವ ಸಂಪ್ರದಾಯ ಇಲ್ಲಿದೆ. ಈ  ರಸ್ತೆಯ ಪೂರ್ವ ತುದಿಯಲ್ಲಿ ನಂದಿ ಪ್ರತಿಮೆ ಇದೆ, ಅದರ ಪಕ್ಕದಲ್ಲಿ ಎರಡು ಅಂತಸ್ತಿನ ಫೋಟೋ ಗ್ಯಾಲರಿ ಪೆವಿಲಿಯನ್ ಇದೆ.

Jolad Rotti:
Related Post